ಚಾಣಕ್ಯ ನೀತಿ, ಶ್ಲೋಕ- 16

|| ಸ್ತ್ರೀಣಾಂ ದ್ವಿಗುಣಮಾದಹಾರೋ ಲಜ್ಜಾ ಚಾಪಿ ಚತುರ್ಗುಣಾ |
ಸಾಹಸಂ ಷಡ್ಗುಣಂ ಚೈವ ಕಾಮಾಶ್ಚಾಷ್ಟಗುಣಾ ಸ್ಮೃತಾಃ  ||

ಸ್ತ್ರೀಯರು ಪುರುಷರಿಗಿಂತಾ ಎರಡು ಪಟ್ಟು ಆಹಾರವನ್ನು ಸೇವಿಸುವರು, ಹಾಗೆಯೇ ಅವರಿಗೆ ನಾಚಿಕೆಯೂ ನಾಲ್ಕುಪಟ್ಟು ಹೆಚ್ಚಾಗಿರುತ್ತದೆ. ಸಾಹಸ ಪ್ರವೃತ್ತಿಯೂ ಆರುಪಟ್ಟು ಹೆಚ್ಚಾಗಿರುತ್ತದೆ, ಅಲ್ಲದೇ ಅವರಲ್ಲಿ ಕಾಮೇಚ್ಛೆಯು ಎಂಟು ಪಟ್ಟು ಹೆಚ್ಚಾಗಿರುತ್ತದೆ ಎಂದು ಈ ಶ್ಲೋಕದಲ್ಲಿ ಹೇಳಲಾಗಿದೆ.

ಇತಿ ಪ್ರಥಮೋಧ್ಯಾಯಃ

ಚಾಣಕ್ಯ ನೀತಿ, ಶ್ಲೋಕ- 15

|| ವಿಷಾದಪ್ಯಮೃತಂ ಗ್ರಾಹ್ಯಂ ಅಮೇಧ್ಯಾದಪಿ ಕಾಂಚನಮ್ |
ನೀಚಾದಪ್ಯುತ್ತಮಾಂ ವಿದ್ಯಾಂ ಸ್ತ್ರೀರತ್ನಂ ದುಷ್ಕುಲಾದಪಿ ||

ವಿಷದಲ್ಲಿ ಬೆರೆತಿರುವ ಅಮೃತವನ್ನೂ, ಮಲ ಮೂತ್ರದಲ್ಲಿ ಬಿದ್ದಿದ್ದರೂ ಸಹ ಬಂಗಾರವನ್ನೂ ತೆಗೆದುಕೊಳ್ಳಬಹುದು. ಶ್ರೇಷ್ಠವಾದ ವಿದ್ಯೆಯು ನೀಚರಲ್ಲಿದ್ದರೂ ಸಹ ಅವರಿಗೆ ಶಿಷ್ಯನಾಗಿ ಅದನ್ನು ಪಡೆದುಕೊಳ್ಳಬಹುದು ಹಾಗೂ ಯಾವ ಕುಲದಲ್ಲಿ ಹುಟ್ಟಿದ್ದರೂ ಸಹ ಸ್ತ್ರೀಯು ಸದ್ಗುಣಸಂಪನ್ನಳಾಗಿದ್ದರೆ ಅವಳನ್ನು ಸ್ವೀಕರಿಸಬಹುದು. ಇದಾವುದೂ ತಪ್ಪಾಗಲಾರದು.

ಚಾಣಕ್ಯ ನೀತಿ, ಶ್ಲೋಕ- 14

|| ನದೀನಾಂ ಚ ನಖೀನಾಂ ಚ ಶೃಂಗೀಣಾಂ ಶಸ್ತ್ರಪಾಣಿನಾಮ್ |
ವಿಶ್ವಾಸೋ ನೈವ ಕರ್ತವ್ಯಃ ಸ್ತ್ರೀಷು ರಾಜಕುಲೇಷು ಚ ||

ಯಾರೇ ಆಗಲಿ ನದಿಗಳನ್ನು, ಉಗುರುಗಳನ್ನು ಆಯುಧವನ್ನಾಗಿ ಬಳಸಿಕೊಳ್ಳುವ ಹುಲಿ, ಸಿಂಹ, ಕರಡಿ, ಬೆಕ್ಕು ಇತ್ಯಾದಿ ಪ್ರಾಣಿಗಳನ್ನು, ಕೊಂಬುಗಳುಳ್ಳ ಪ್ರಾಣಿಗಳನ್ನೂ, ಶಸ್ತ್ರಾಸ್ತ್ರಗಳನ್ನು ಹಿಡಿದಿರುವವರನ್ನೂ, ಹೆಂಗಸರನ್ನು, ಹಾಗೂ ರಾಜಮನೆತನದವರನ್ನೂ ಎಂದಿಗೂ ನಂಬಬಾರದು.

ಚಾಣಕ್ಯ ನೀತಿ, ಶ್ಲೋಕ- 13

|| ವರಯೇತ್ ಕುಲಜಾಂ ಪ್ರಾಜ್ಞೋ ವಿರೂಪಾಮಪಿ ಕನ್ಯಕಾಮ್ |
ರೂಪಶೀಲಾಂ ನ ನೀಚಸ್ಯ ವಿವಾಹೇ ಸದೃಶೇ ಕುಲೇ ||

ಬುದ್ದಿವಂತರಾದವರು ರೂಪವತಿಯಲ್ಲದಿದ್ದರೂ ಸಹ ಸತ್ಕುಲದಲ್ಲಿ ಜನಿಸಿದ ಕನ್ಯೆಯನ್ನೇ ವಿವಾಹ ಮಾಡಿಕೊಳ್ಳಬೇಕು. ಪರಮ ಸುಂದರಿಯಾಗಿದ್ದರೂ ಸಹ ನೀಚಕುಲದ ಕನ್ಯೆಯನ್ನು ವಿವಾಹ ಮಾಡಿಕೊಳ್ಳಬಾರದು. ಯಾರೇ ಆಗಲಿ ವಿವಾಹವನ್ನು ಸಮಾನಕುಲದಲ್ಲಿಯೇ ಮಾಡಿಕೊಳ್ಳುವುದು ಶ್ರೇಯಸ್ಕರವಾಗಿರುತ್ತದೆ.

ಚಾಣಕ್ಯ ನೀತಿ, ಶ್ಲೋಕ- 12

|| ಯೋ ಧ್ರುವಾಣಿ ಪರಿತ್ಯಜ್ಯ ಅಧ್ರುವಂ ಪರಿಸೇವತೇ |
ಧ್ರುವಾಣಿ ತಸ್ಯ ನಶ್ಯಂತಿ ಅಧ್ರುವಂ ನಷ್ಟಮೇವ ಚ ||

ಯಾರು ಶಾಶ್ವತವಾಗಿರುವುದನ್ನು (ಸತ್ಯವಾದದ್ದನ್ನು) ತೊರೆದು ಅಶಾಶ್ವತವಾದದ್ದನ್ನು ಪರಿಗ್ರಹಿಸುತ್ತಾರೋ ಅವರಿಗೆ ಶಾಶ್ವತವಾದದ್ದು ಕೈಬಿಟ್ಟುಹೋಗುವುದಲ್ಲದೇ, ಮುಂದೆ ಅಶಾಶ್ವತವಾದದ್ದು ಬಿಟ್ಟುಹೋಗುವುದು, ಇದರಿಂದ ಅವರಿಗೆ ಯಾವ ಗತಿಯು ಇರುವುದಿಲ್ಲ

ಚಾಣಕ್ಯ ನೀತಿ, ಶ್ಲೋಕ- 11

|| ಆತುರೇ ವ್ಯಸನೇ ಪ್ರಾಪ್ತೇ ದುರ್ಭಿಕ್ಷೇ ಶತ್ರುಸಂಕಟೇ |
ರಾಜದ್ವಾರೇ ಶ್ಮಶಾನೇ ಚ ಯಸ್ತಿಷ್ಠತಿ ಸ ಬಾಂಧವಃ ||

ರೋಗಪ್ರಾಪ್ತವಾದಾಗ, ದುಃಖಪೀಡಿತರಾದಾಗ, ದುರ್ಭಿಕ್ಷಕಾಲದಲ್ಲಿ, ಶತೃಗಳು ಆಕ್ರಮಣ ಮಾಡಿದಾಗ, ರಾಜರ ಬಳಿ ಹೋಗುವಾಗ ಹಾಗೂ ಸ್ಮಶಾನದಲ್ಲಿ ಯಾರು ತಮ್ಮ ಹಿಂದೆ ನಿಂತು ಸಹಾಯ ಮಾಡುವರೋ ಅವರೇ ಬಂಧುಗಳೆಂದು ತಿಳಿಯಬೇಕು

ಚಾಣಕ್ಯ ನೀತಿ, ಶ್ಲೋಕ- 10

|| ಜಾನೀಯಾತ್ ಪ್ರೇಷಣೇ ಭೃತ್ಯಾನ್ ಬಾಂಧವಾನ್ ವ್ಯಸನಾಗಮೇ |
ಮಿತ್ರಂ ಚಾಪತ್ತಿಕಾಲೇಷು ಭಾರ್ಯಾಂ ಚ ವಿಭವಕ್ಷಯೇ ||

ಕೆಲಸವನ್ನು ಪೂರೈಸಿಕೊಂಡು ಬರಲು ಸೇವಕರನ್ನು ಕಳಿಸುವುದರಿಂದ, ಕಷ್ಟಕಾಲ ಬಂದಾಗ ಬಂಧುಗಳನ್ನೂ, ಆಪತ್ತು ಬಂದಾಗ ಮಿತ್ರರನ್ನೂ ಹಾಗೂ ದಾರಿದ್ರ್ಯತೆಯು ಬಂದಾಗ ಪತ್ನಿಯನ್ನು ಪರೀಕ್ಷಿಸಬೇಕು. ಇದರಿಂದ ಅವರ ಸಾಚಾತನವು ಬೇಗ ತಿಳಿಯುತ್ತದೆ. ಆಪತ್ಕಾಲದಲ್ಲೂ ಅವರುಗಳು ಸಹಾ ಹಿಂದಿನಂತೆಯೇ ಇದ್ದರೆ ಅವರು ನಿಶ್ಚಯವಾಗಿ ಶ್ರೇಷ್ಠರು ಎಂದು ತಿಳಿಯಬೇಕು.

ಚಾಣಕ್ಯ ನೀತಿ, ಶ್ಲೋಕ- 9

|| ಲೋಕಯಾತ್ರಾ ಭಯಂ ಲಜ್ಜಾ ದಾಕ್ಷಿಣ್ಯಂ ತ್ಯಾಗಶೀಲತಾ |
ಪಂಚ ಯತ್ರ ನ ವಿದ್ಯಂತೇ ನ ಕುರ್ಯಾತ್ ತತ್ರ ಸಂಗತಿಮ್ ||

ಯಾರಲ್ಲಿ ವ್ಯವಹಾರಜ್ಞಾನ, ಭಯ, ನಾಚಿಕೆ, ದಾಕ್ಷಿಣ್ಯ ಸ್ವಭಾವ ಹಾಗೂ ತ್ಯಾಗಬುದ್ಧಿ ಈ ಐದು ಗುಣಗಳು ಇರುವುದಿಲ್ಲವೋ ಅಂತಹವರ ಸ್ನೇಹವನ್ನು ಮಾಡಲೇಬಾರದು.

ಚಾಣಕ್ಯ ನೀತಿ, ಶ್ಲೋಕ- 8

|| ಧನಿಕಃ ಶ್ರೋತ್ರಿಯೋ ರಾಜಾ ನದೀ ವೈದ್ಯಸ್ತು ಪಂಚಮಃ |
ಪಂಚ ಯತ್ರ ನ ವಿದ್ಯಂತೇ ನ ತತ್ರ ದಿವಸಂ ವಸೇತ್ ||

ಶ್ರೀಮಂತರೂ, ಬ್ರಾಹ್ಮಣ, ರಾಜ, ನದಿ ಹಾಗೂ ವೈದ್ಯ ಈ ಐವರು ಯಾವ ಗ್ರಾಮ ಅಥವಾ ನಗರದಲ್ಲಿ ಇಲ್ಲವೋ ಅಲ್ಲಿ ಒಂದು ದಿನವೂ ವಾಸಮಾಡಬಾರದು.

ಚಾಣಕ್ಯ ನೀತಿ, ಶ್ಲೋಕ- 7

|| ಯಸ್ಮಿನ್ ದೇಶೇ ನ ಸನ್ಮಾನೋ ನ ವೃತ್ತಿಃ ನ ಚ ಬಾಂಧವಾಃ |
ನ ಚ ವಿದ್ಯಾಗಮೋಪ್ಯಸ್ತಿ ವಾಸಂ ನ ಕಾರಯೇತ್ ||

ಯಾರಿಗೇ ಆಗಲಿ ಯಾವ ದೇಶದಲ್ಲಿ ಗೌರವವಿರುವುದಿಲ್ಲವೋ, ಎಲ್ಲಿ ಉದ್ಯೋಗವನ್ನು ಮಾಡಿಕೊಂಡು ಜೀವನವನ್ನು ಸಾಗಿಸಲು ಸಾಧ್ಯವಿರುವುದಿಲ್ಲವೋ, ಎಲ್ಲಿ ಬಂಧು-ಬಳಗದವರು ಸಹ ಇರುವುದಿಲ್ಲವೋ, ಎಲ್ಲಿ ವಿದ್ಯೆಯನ್ನು ಕಲಿಯಲು ಸಾಧ್ಯವಿಲ್ಲವೋ ಅಂತಹ ದೇಶದಲ್ಲಿ ಅವರು ವಾಸಮಾಡಬಾರದು.